ಮಂಡ್ಯ: ಜೂನ್ 14 ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಬ್ರಹೇಶ್ವರ ದೇವಾಲಯ ಆವರಣದಲ್ಲಿ ನಡೆಯುತ್ತಿರುವ ಮಲೆನಾಡು ಗಿಡ್ಡ ಸಂರಕ್ಷಣ ಹಾಗೂ ಸಂವರ್ಧನ ಅಭಿಯಾನ, ಹಾಗೂ ಸೇವಾ ಗತಿವಿಧಿ – ಮೈಸೂರು ವಿಭಾಗ, ಕಾಮಧೇನು ಗೋಶಾಲೆ ಹಮ್ಮಿಕೊಂಡ ಉಚಿತ ದೇಸಿ ತಳಿ ಗೋವು ವಿತರಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಪೆರ್ಲ ಗೋಶಾಲೆಯಿಂದ ದೇಸಿ ತಳಿ ಗೋವುಗಳನ್ನು ಸಾಗಿಸಲಾಗುತ್ತಿತ್ತು.
ಈ ಸಂದರ್ಭದಲ್ಲಿ ಸಣ್ಣ ಗಾಡಿಯಲ್ಲಿ ದೂರ ಪ್ರಯಾಣ ಸಮಸ್ಯೆ ಎದುರಾದ ಕಾರಣ, ಮಧ್ಯದಲ್ಲಿ ಗಾಡಿ ಬದಲಾಯಿಸಲಾಗುತ್ತಿತ್ತು. ಇದನ್ನು ಅಕ್ರಮ ಸಾಗಾಟವೆಂದು ಶಂಕಿಸಿದ ಕೆಲವು ಸ್ಥಳೀಯ ಹಿಂದೂ ಕಾರ್ಯಕರ್ತರ ಸಮಯೋಚಿತ ನಿರ್ಧಾರದಿಂದ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಇದು ಅಕ್ರಮ ಸಾಗಾಟವಲ್ಲ, ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿಯೇ ಸಾಗಿಸಲಾಗುತ್ತಿದೆ ಎಂಬುದನ್ನು ದೃಢಪಡಿಸಿದರು. ಬಳಿಕ ಸರಿಯಾದ ದಾಖಲೆಗಳ ಪರಿಶೀಲನೆಯ ಬಳಿಕ ಗೋವುಗಳನ್ನು ಸಾಗಲು ಅನುಮತಿ ನೀಡಿ ಕಳುಹಿಸಿದರು.
ಈ ಸಂದರ್ಭದಲ್ಲಿ ಗೊಂದಲ ನಿವಾರಣೆಗಾಗಿ ಹಾಗೂ ಸ್ಪಷ್ಟತೆ ಕಲ್ಪಿಸುವ ಉದ್ದೇಶದಿಂದ ಹಿಂದೂ ನಾಯಕರಾದ ಅರುಣ್ ಕುಮಾರ್ ಪುತ್ತಿಲ, ಮುರಳಿ ಕೃಷ್ಣ ಹಸಂತಡ್ಕ ಹಾಗೂ ಅಕ್ಷಯ್ ರಜಪೂತ್ (ಕಲ್ಲಡ್ಕ) ಮತ್ತಿತರ ಕಾರ್ಯಕರ್ತರು ವಿವಿಧ ಇಲಾಖೆಗಳೊಂದಿಗೆ ಸಂಪರ್ಕಿಸಿ ಸಹಕಾರ ನೀಡಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ಪಾಣಾಜೆಯ ಹಿಂದೂ ಕಾರ್ಯಕರ್ತರು ತೋರಿದ ಜಾಗೃತೆ ಮತ್ತು ನಿಷ್ಠೆಯನ್ನು ಹಿಂದೂ ಸಮಾಜ ಮೆಚ್ಚಿ ಶ್ಲಾಘಿಸಿದೆ.
ಅಂತಿಮವಾಗಿ, ದೇಶೀಯ ತಳಿ ಗೋವುಗಳು ಯಶಸ್ವಿಯಾಗಿ ಮಂಡ್ಯದಲ್ಲಿ ನಡೆಯುವ ಕಾರ್ಯಕ್ರಮದ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.