ಚಿಕ್ಕಮಗಳೂರು : ಬಲ್ಲಾಳ ರಾಯನ ದುರ್ಗಾ ಪ್ರವಾಸಿ ತಾಣಕ್ಕೆ ಚಾರಣಕ್ಕೆ ತೆರಳಿದ ವಿದ್ಯಾರ್ಥಿಗಳು ಕಾಡಿನಲ್ಲಿ ದಾರಿ ತಪ್ಪಿದ ದಾರುಣ ಘಟನೆ; ಬಾಳೂರು ಪೊಲೀಸರ 6 ಗಂಟೆಗಳ ಶ್ರಮದ ಬಳಿಕ ರಕ್ಷಣೆ!

  • 10 Jun 2025 02:49:23 PM


ಚಿಕ್ಕಮಂಗಳೂರು: ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣದಲ್ಲಿ ಚಾರಣಕ್ಕೆ ತೆರಳಿದ್ದ 11 ಜನರ ವಿದ್ಯಾರ್ಥಿಗಳ ತಂಡ ಕಾಡಿನಲ್ಲಿ ದಾರಿ ತಪ್ಪಿ ಮಧ್ಯರಾತ್ರಿವರೆಗೂ ಪರದಾಡಿದ ಘಟನೆಯೊಂದು ಸಂಭವಿಸಿದೆ.

 

ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ಐದು ಹುಡುಗರು ಮತ್ತು ಐದು ಹುಡುಗಿಯರು ಟ್ರಕ್ಕಿಂಗ್‌ಗೆ ಬಂದಿದ್ದರು ಅವರ ಜೊತೆ ಕೂಡ ಡ್ರೈವರ್ ಸೇರಿ ಒಟ್ಟು 11 ಜನರು ಚಾರಣಕ್ಕೆ ಹತ್ತಿದ್ದರು.

 

 ಬಲ್ಲಾಳರಾಯನ ದುರ್ಗದಲ್ಲಿ ಪ್ರವೇಶ ಟಿಕೆಟ್ ತೆಗೆದುಕೊಂಡರೂ ಮಾರ್ಗ ಸ್ಪಷ್ಟವಿಲ್ಲದೆ ಮಂಗಳೂರಿನ ಬಂಡಾಜೆ ದಾರಿ ಹಿಡಿದು ಕಾಡಿನಲ್ಲಿ ದಾರಿ ತಪ್ಪಿದ್ದರು ಎನ್ನಲಾಗಿದೆ.

 

 ಕಾಡಿನ ಕಲ್ಲು-ಮುಳ್ಳುಗಳಿಂದ ತುಂಬಿರುವ ಹಾದಿಯಲ್ಲಿ ಇಡೀ ದಿನ ಪರದಾಡಿದ ವಿದ್ಯಾರ್ಥಿಗಳು ಭಯ ಭೀತರಾಗಿ ಸುತ್ತಿ ನಿತ್ರಾಣಗೊಂಡಿದ್ದರು.

 

ವಿಷಯ ತಿಳಿದ ನಂತರ ಬಾಳೂರು ಠಾಣೆಯ ಪೊಲೀಸರು ಮತ್ತು ಮೂಡಿಗೆರೆ ತಾಲ್ಲೂಕಿನ ಸ್ಥಳೀಯ ಯುವಕರ ಶೋಧ ಕಾರ್ಯಚರಣೆಯಲ್ಲಿ ಮಧ್ಯರಾತ್ರಿ 2ರ ಹೊತ್ತಿಗೆ ಎಲ್ಲ 11 ಜನರನ್ನು ಸುರಕ್ಷಿತವಾಗಿ ಪತ್ತೆ ಹಚ್ಚಿದರು.

 

 ಬಳಿಕ ಅವರನ್ನು ಗುಡ್ಡದಿಂದ ಕೆಳಗೆ ಕರೆತಂದು ಊಟ ನೀಡಿ, ಚಿತ್ರದುರ್ಗಕ್ಕೆ ಮರಳಲು ವ್ಯವಸ್ಥೆ ಮಾಡಿದರು.

 

ಈ ಸಾಹಸಮಯ ರಕ್ಷಣಾ ಕಾರ್ಯದಲ್ಲಿ ಬಾಳೂರು ಪಿಎಸ್‌ಐ ದಿಲೀಪ್ ಹಾಗೂ ಸ್ಥಳೀಯ ಯುವಕರ ಪಾತ್ರ ಮಹತ್ವದ್ದು. ರಕ್ಷಣೆಗೊಂಡ ವಿದ್ಯಾರ್ಥಿಗಳು ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿದ್ದಾರೆ.