ಬಂಟ್ವಾಳ : ಬಂಟ್ವಾಳ ತಾಲೂಕಿನ ಕೊಳ್ನಡು ಗ್ರಾಮ ಪಂಚಾಯಿತಿ ಕಚೇರಿಯ ಪಕ್ಕದಲ್ಲಿ ಹಾದು ಹೋಗುವ ಪುಡ್ಕೆತ್ತೂರು -ಮದಕ ಸಂಪರ್ಕ ರಸ್ತೆಯ ಸ್ಥಿತಿ ಗಂಭೀರವಾಗಿದ್ದು ಎರಡೂ ದಶಕಗಳಿಂದ ದುರಸ್ತಿಯ ಬೆಳಕು ಕಾಣದೇ ಶೋಚನೀಯ ಸ್ಥಿತಿಯಲ್ಲಿದೆ.
ಸುಮಾರು ಒಂದೂವರೆ ಕಿಲೋಮೀಟರ್ ಉದ್ದದ ಈ ರಸ್ತೆಯಲ್ಲಿ ನೂರಾರು ಮಂದಿ ದಿನಂಪ್ರತಿ ಓಡಾಡುತ್ತಾರೆ. ಆದರೆ ಬೇಸಿಗೆಯಲ್ಲಿ ಧೂಳಿನಿಂದ ತೊಂದರೆ ಅನುಭವಿಸುವುದು ಮಳೆಗಾಲದಲ್ಲಿ ಕೆಸರಿನಲ್ಲಿ ನಡೆಯಲು ಕೂಡ ಸಾಧ್ಯವಾಗದ ಪರಿಸ್ಥಿತಿ. ವಾಹನ ಸಂಚಾರ ದೂರದ ಮಾತಾಗಿ ಪರಿಣಮಿಸಿ ಬಿಟ್ಟಿದೆ.
ಸ್ಥಳೀಯ ನಿವೃತ್ತ ಶಿಕ್ಷಕಿ ಹಾಗೂ ಸಾಹಿತಿ ಅನಸೂಯಾ ಈಶ್ವರಚಂದ್ರ ರಾವ್ ಅವರು ಹಲವಾರು ಬಾರಿ ಗ್ರಾಮ ಪಂಚಾಯತಿ ಹಾಗೂ ಸದಸ್ಯರಿಗೆ ಮನವಿ ಮಾಡಿದ್ದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ.
ಜಿಲ್ಲಾಧಿಕಾರಿಗೂ ಅರ್ಜಿ ನೀಡಿದ್ದೇವೆ, ಮುಂದಿನ ಗ್ರಾಮಸಭೆಯಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸುತ್ತೇನೆ ಎಂದು ಅವರು ಹೇಳುತ್ತಾರೆ.
ಕಾಂಕ್ರೀಟ್ ರಸ್ತೆ ಸಾಧ್ಯವಿಲ್ಲದಿದ್ದರೂ ಕನಿಷ್ಠ ತಾತ್ಕಾಲಿಕ ದುರಸ್ತಿ, ಹೊಂಡ ಗುಂಡಿ ಮುಚ್ಚುವ, ಚರಂಡಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದಲ್ಲವೇ ಎಂದು ಅಲ್ಲಿನ ಕೂಲಿ ಕಾರ್ಮಿಕ ತಿಮ್ಮಪ್ಪ ಗೌಡ ಅವರು ಪ್ರಶ್ನಿಸಿದ್ದಾರೆ.
ವಾರದಿಂದ ಸುರಿದ ಮಳೆಯಿಂದ ರಸ್ತೆ ಇನ್ನಷ್ಟು ಕೆಸರಿನಲ್ಲಿ ಮುಳುಗಿದ್ದು, ಆಟೋ ಚಾಲಕರು ಈ ಬದಿ ಬರುವುದನ್ನೇ ನಿರಾಕರಿಸುತ್ತಿದ್ದಾರೆ.
ಇದರ ಸಮೀಪದ ಕೆರೆಗೆ 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ಪ್ರಸ್ತಾವನೆ ಇದ್ದರೂ ಅದು ಅರ್ಧಕ್ಕೆ ಅರ್ಧ ದುಡ್ಡು ಒಳಗೆ ಹಾಕಿದ್ದಾರೋ ಎನ್ನುವ ಶಂಕೆ ಇದೆ ಎಂಬುದಾಗಿ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಮತ್ತು ಕೆರೆಯ ಸ್ಥಿತಿ ಶೋಚನೀಯ ಎಂದು ಹೇಳುತ್ತಾರೆ.
ಸೋಮಾರಿ ನಿರ್ಲಕ್ಷ್ಯವೋ ಅಥವಾ ಯೋಜಿತ ಅವಹೇಳನೆ? ಎಂಬ ಪ್ರಶ್ನೆ ಈಗ ನಾಗರಿಕರಲ್ಲಿ ಉದ್ಭವವಾಗಿದೆ. ಶೀಘ್ರದಲ್ಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಸಂಘಟಿತ ಹೋರಾಟಕ್ಕೆ ಸಿದ್ಧ ಎಂದು ನಾಾಗರಿಕರು ತಿಳಿಸಿದ್ದಾರೆ.