ಮುಂಡಿತ್ತಡ್ಕ: ಶೇಣಿ-ಮುಗು ಗ್ರಾಮಗಳ ಅಧಿಪತಿ ಮುಗು ಶ್ರೀ ಸುಬ್ರಾಯ ದೇವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಪ್ರಥಮ ಹಂತದ ಬೃಹತ್ ಕರಸೇವೆಯು ಭಕ್ತಸಮುದಾಯದ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕಳೆದ ಎರಡುವರೆ ದಶಕಗಳ ಹಿಂದೆ ಬ್ರಹ್ಮಕಲಶ ಕಳೆದು ಪ್ರಸಿದ್ಧಿ ಪಡೆದಿದ್ದ ಈ ಪವಿತ್ರ ಪುಣ್ಯ ಕ್ಷೇತ್ರವು ಇತ್ತೀಚೆಗೆ ಅಜೀರ್ಣಾವಸ್ಥೆಗೆ ತಲುಪಿದ್ದು, ಇದನ್ನು ಮನಗಂಡ ಸ್ವಯಂ ಸೇವಕ ಭಕ್ತರ ಸಹಭಾಗಿತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ತೊಡಗಿದ್ದಾರೆ.
ಈ ಹಿನ್ನೆಲೆಯಲ್ಲಿ ಭಾನುವಾರ ದೇವಾಲಯದ ಆವರಣದಲ್ಲಿ ಶ್ರಮದಾನದ ಮೂಲಕ ಪ್ರಥಮ ಹಂತದ ಕರಸೇವೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಮಹಾಬಲೇಶ್ವರ ಭಟ್ಟರು ಹಂಚು ತೆಗೆದು ಮೊಕ್ತೇಸರರಾದ ರವೀಂದ್ರ ಮಾಸ್ತರ್ ಅವರಿಗೆ ಹಸ್ತಾಂತರಿಸುವುದರ ಮೂಲಕ ಕರಸೇವೆಗೆ ಉದ್ಘಾಟನೆ ನೀಡಿದರು.
ಈ ಸಂದರ್ಭದಲ್ಲಿ ಪವಿತ್ರಪಾಣಿ ಆಡಳಿತ ಸಮಿತಿಯ ರಾಮ್ ಕುಮಾರ್ ಮುಜುಕುಮೂಲೆ, ವಿಜಯಕುಮಾರ್ ಪಾರೆ, ಉಮಾಮಹೇಶ್ವರ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಳ್ಳ ವೆಂಕಟ್ರಮಣ ಭಟ್, ವೇಣುಗೋಪಾಲ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಆಚಾರ್ಯ, ಪ್ರಸಾದ್ ಕುಂಜಿಪದವು, ಮಹಿಳಾ ಸಂಘ, ಷಣ್ಮುಖ ಯುವಕ ವೃಂದ ಹಾಗೂ ಊರಿನ ಹಲವಾರು ಭಕ್ತರು ಶ್ರಮದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.