ಬೈಂದೂರು: ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಬೈಂದೂರು ಮಂಡಲ ಬಿಜೆಪಿ ವತಿಯಿಂದ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ಗಳ ಮುಂಭಾಗದಲ್ಲಿ ಸಮನ್ವಿತ ಧರಣಿ ಹಾಗೂ ಪ್ರತಿಭಟನೆ ನಡೆಯಿತು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಬಿಜೆಪಿ ಶಾಸಕ ಗುರುರಾಜ್ ಗಂಟಿಹೊಳೆ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಗಳಲ್ಲಿ ಪ್ರತಿಭಟನೆಗಳು ನಡೆದವು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರಕ್ಕೆ ಕಣ್ಣು-ಕಿವಿ ಇಲ್ಲದಂತಾಗಿದೆ. ಜನಸಾಮಾನ್ಯರ ಸಂಕಷ್ಟಗಳು ಈ ಭ್ರಷ್ಟ ಸರ್ಕಾರದ ಗಮನಕ್ಕೆ ಬರುತ್ತಿಲ್ಲ. ಮತದಾರರ ನಿರ್ಣಯವನ್ನೂ ಗೌರವಿಸದೆ, ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿದ ಕ್ಷೇತ್ರಗಳ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದೆ," ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಅದಲ್ಲದೆ “ಅಕ್ರಮ ಸಕ್ರಮ ಅರ್ಜಿಗಳನ್ನು ಕಾರಣವಿಲ್ಲದೆ ತಿರಸ್ಕರಿಸುವುದು, ಭೂ ಪರಿವರ್ತನೆ ವಿಷಯದಲ್ಲಿ ಏಕ ವಿನ್ಯಾಸ ಕೊರತೆ, ವಸತಿ ಯೋಜನೆಗಳಲ್ಲಿ ಅಕ್ರಮ, ಬೆಲೆ ಏರಿಕೆ, ಸಾಮಾಜಿಕ ಪಿಂಚಣಿ ರದ್ದುಪಡಿಸುವುದು–ಇವು ಎಲ್ಲಾ ಜನವಿರೋಧಿ ಕ್ರಮಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೂರು, ಹಳ್ಳಿಹೊಳೆ, ಕೆರಾಡಿ, ಹೇರೂರು, ಉಳ್ಳೂರು 74, ಗುಜ್ಜಾಡಿ, ಗಂಗೊಳ್ಳಿ, ತಲ್ಲೂರು, ಅಂಪಾರು, ಗುಲ್ವಾಡಿ, ಇಡೂರು ಕುಂಜ್ಜಾಡಿ, ಸಿದ್ದಾಪುರ, ಚಿತ್ತೂರು, ಹಕ್ಲಾಡಿ, ಹಟ್ಟಿಯಂಗಡಿ, ಕಾವ್ರಾಡಿ, ಶಂಕರನಾರಾಯಣ, ಆಲೂರು, ಬೈಂದೂರು ಪಟ್ಟಣ, ಹೆಮ್ಮಾಡಿ, ಜಡ್ಕಲ್ ಮುದೂರು, ಶಿರೂರು, ಕಟ್ ಬೆಲ್ತೂರು, ಕೊಲ್ಲೂರು, ಖಂಬದಕೋಣೆ, ಉಪ್ಪುಂದ, ಹೊಸಂಗಡಿ, ಆಜ್ರಿ ಮೊದಲಾದ ಗ್ರಾಮ ಪಂಚಾಯತ್ಗಳಲ್ಲಿ ಪ್ರತಿಭಟನೆ ನಡೆಸಿ, ಸ್ಥಳೀಯ ಪಿಡಿಒಗೆ ದೂರು ಸಲ್ಲಿಸಲಾಯಿತು.